ಶುಕ್ರವಾರ, ಅಕ್ಟೋಬರ್ 18, 2013

ನೀ ಬರಿಯ ಕನಸು...

ನಿನ್ನ ಗೆಲ್ಲುವ ಸಾಮರ್ಥ್ಯ ನನಗಿಲ್ಲ,
ಸೋಲಿಗೆ ನಾ ಹೊಸಬನಲ್ಲ,
ನಿನ್ನ ವಿರಹಕೆ ಪರಿಚಿತನಾಗುವ ಭೀತಿ 
ಮೀರಿ ಬದುಕುವ ಬಲ ನನಗಿಲ್ಲ... 




ಬಂದು ಹೋಗುವ ನಡುವೆ...

ಸುಮ್ಮನೇ ಸಾಗುತಿರಲು ಸಮಯ,
ಕಮರಿದೆ ಬರಿ ಕನಸಿನಲೇ ಈ ಹರೆಯ.. 

ಕಳೆದ ಕ್ಷಣಗಳು ಬಂದು 
ಇರುವ ಕ್ಷಣಗಳ ಕೊಂದು 
ತಂದ ನೆನಪುಗಳೋ ಬಲು ಧೂರ್ತ;
ಅನರ್ಥ ಮಾತಿನೊಳು ಬಾಳು 
ವ್ಯರ್ಥ ವ್ಯರ್ಥ !

ಬಾಳ ಬೆಳಗಬೇಕಿದೆ ಸಾಧನೆಯ ದೀಪ್ತಿ 
ಬರುವ ನಾಳೆಗಳಿಗೆ ಸಿಗಬೇಕಿದೆ 
ಸಾರ್ಥಕತೆಯ ಸಂತೃಪ್ತಿ... 




ಮೂರು ಸಂವತ್ಸರ...


ಕೂಡಿ ಕಳೆದ ಹರುಷಕೆ ಇಂದು ಮೂರು ವರುಷ,
ಮನದಿ ಸವಿನೆನಪಿನ ಮುಗುಳ್ನಗೆಯೇ ಪ್ರತಿ ನಿಮಿಷ,
ಕಾರಣ ಕೇಳದೆ ಓಡುವ ಕಾಲವು 
ತಂದ ಉಡುಗೊರೆಗಳು ನೂರಾರು,
ಅರಿವಿಗೆ ಸಿಗದೆ ಗತಿಸಿದ ಸಂಬಂಧಗಳು
ಸಾವಿರಾರು.... 



ನೀ ಅವ್ಯಕ್ತ ಕಡಲು !!

ನಿನ್ನ ಸಾವಿರ ಸವಿ ನೆನಪುಗಳ 
ಮೋಹಕ ಮುಗ್ಧ ರೂಪಗಳ 
ಎನ್ನ ಕಾವ್ಯ ಕಾನನದ 
ಪದ ಪುಷ್ಪ ಗಂಧದ ಸುಳಿಯೊಳು,
ಬಂಧಿಸದಾದೆನು..!

ನಿನ್ನ ಮನದ ವಿಸ್ಮಯವ 
ಸುಡುವ ಮೌನ ಹಂಬಲವ 
ಕವಿತೆ ಸಾಲ ಸಾಮ್ರಾಜ್ಯದೊಳು 
ಅಕ್ಷರದರಮನೆಯ ಕಟ್ಟಿ 
ಕವನ ಕನಕವೃಷ್ಟಿಗೈದು 
ಸಿಂಗರಿಸದಾದೆನು ...!